ಪರೀಕ್ಷಾರ್ಥಿಗಳು
ಪರೀಕ್ಷಾರ್ಥಿಗಳ ದಂಡಯಾತ್ರೆ
ಸಾಗುತ್ತಲೇ ಇದೆ
ಋತು ಚಕ್ರದ ಹಾಗೆ.. ಈ ದಿವಸ ಮಾಸ..
ಬರೋ ವರುಷ ಹೀಗೆ
ಉರುಳುವ ಕಾಲ
ಪ್ರಶ್ನೆಗಳೊಂದಿಗೆ ಉತ್ತರ ಅರಸುತ್ತ
ಈಜಿಗೆ ಬಿದ್ದ ಹಾಗೆ!
ಹರಿವ ನೀರಿನಾಳ
ಮಬ್ಬು ಕತ್ತಲ ಒಳ
ಹಾಯ್ದು ತಡಕಿ
ಮೇಲೆ ಮೇಲೆ ದಾಟಿ
ಒಳಸುಳಿಗಳೊಳಗೆ ಸುದೀರ್ಘ ಏಕಾಂತ
ಕಳೆಯುವಂತೆ
ಚಿತ್ತಾದ ಉತ್ತರಗಳ ನಡುವೆ
ಅಬ್ಬೇಪಾರಿ
ಒಂದೆಳೆ ನೆನೆಪು ಮಾಸಿ
ಎರಡು ಸುತ್ತು ತೆಳ್ಳಗಾಗಿ
ಕಳೆಗಟ್ಟಲು ಪರೀಕ್ಷೆ ತೀರಲೇ ಬೇಕು.
ಉತ್ತರಗಳೇ ಕಾಣದ
ಹಲವು ಒಗಟುಗಳಿಗೆ ಮುಗ್ಗರಿಸಿ
ಪರೀಕ್ಷೆಯೇ ಬ್ರಹ್ಮಾಂಡದ ಕೇಂದ್ರವೆ ಆದಂತೆ
ಮೆರೆಸಿದರೂ
ಯಾವ ಪರೀಕ್ಷೆಗೂ ಕಾಯದೆ
ಗಂಟು ಮೂಟೆ ಬಿಟ್ಟು ಹೊರಡುವ
ತುರ್ತು ನಿರ್ಗಮನದ
ಯಕ್ಷಪ್ರಶ್ನೆಗೆ
ಮರೆತಂತೆ ಇದ್ದುಬಿಡುವ ಮರುಳಷ್ಟೇ..
ಧರ್ಮರಾಯನ ಉತ್ತರ.
- ವನಿತಾ ಪಿ ವಿಶ್ವನಾಥ್
Comments
Post a Comment